ಶಶಿಕುಮಾರ್. (ಜನನ ೨ ಡಿಸೆಂಬರ್ ೧೯೬೫) ಕನ್ನಡ ಚಲನಚಿತ್ರ ನಟ ಮತ್ತು ರಾಜಕಾರಣಿ. ತನ್ನ ವಿಭಿನ್ನ ನೃತ್ಯ ಶೈಲಿಗೆ ಹೆಸರುವಾಸಿಯಾಗಿರುವ ಶಶಿಕುಮಾರ್, ಕನ್ನಡ ಚಲನಚಿತ್ರಗಳಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಲನಚಿತ್ರರಂಗದಲ್ಲಿ ಸುಪ್ರೀಂ ಹೀರೋ ಎಂದು ಖ್ಯಾತರಾಗಿದ್ದಾರೆ. ಅವರು ಕೆಲವೊಂದು ತಮಿಳು ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದಾರೆ == ನಟನಾ ವೃತ್ತಿ == ಚಿರಂಜೀವಿ ಸುಧಾಕರ್ ಶಶಿಕುಮಾರ್ ಅವರು ನಟಿಸಿದ ಮೊದಲ ಚಿತ್ರ. ಈ ಚಿತ್ರದ ಮೂಲಕ ಶಶಿಕುಮಾರ್ ಖಳನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ೧೯೮೯ರಲ್ಲಿ ಬಿಡುಗಡೆಯಾದ, ವಿ.ರವಿಚಂದ್ರನ್ ಮತ್ತು ಪೂನಂ ಧಿಲ್ಲೋನ್ ಅಭಿನಯದ ಯುದ್ಧಕಾಂಡ ಚಲನಚಿತ್ರದಲ್ಲಿ ಖಳ-ವಿದ್ಯಾರ್ಥಿಯಾಗಿ, ಸಿಬಿಐ ಶಂಕರ್ ಮತ್ತು ಎಸ್.ಪಿ ಸಾಂಗ್ಲಿಯಾನದಂತಹ ದೊಡ್ಡ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ೧೯೯೦ರ ಯಶಸ್ವಿ ಚಲನಚಿತ್ರಗಳಾದ ರಾಣಿ ಮಹಾರಾಣಿ ಮತ್ತು ಬಾರೆ ನನ್ನ ಮುದ್ದಿನ ರಾಣಿ- ಈ ಎರಡು ಚಿತ್ರಗಳು ಶಶಿಕುಮಾರ್ ಅವರನ್ನು ಕನ್ನಡ ಚಿತ್ರರಂಗದ ನಾಯಕನಟನ ಸ್ಥಾನದಲ್ಲಿ ನಿಲ್ಲಿಸಲು ಸಹಕಾರಿ ಆದವು. ಶಶಿಕುಮಾರ್ ಸುಧಾರಾಣಿ, ತಾರಾ, ಸೌಂದರ್ಯ ಮತ್ತು ಸೀತಾರಾ ಅವರಂತಹ ಜನಪ್ರಿಯ ನಟಿಯರೊಂದಿಗೆ ಸಹ ಜೋಡಿಯಾಗಿ ನಟಿಸಿದ್ದಾರೆ. == ಅಪಘಾತ == ತನ್ನ ಸಿನೆಮಾ ಜೀವನದ ಉತ್ತುಂಗದಲ್ಲಿ ಇದ್ದಾಗ ನಡೆದ ರಸ್ತೆ ಅಪಘಾತ, ಶಶಿಕುಮಾರ್ ಅವರ ಮುಖ ಮಾತ್ರವಲ್ಲ ಸಿನೆಮಾ ಜೀವನದ ಚಹರೆಯನ್ನೇ ಬದಲಿಸಿಬಿಟ್ಟಿತು. 1990 ರ ದಶಕದ ಮಧ್ಯಭಾಗದಲ್ಲಿ ಬೆಂಗಳೂರಿನ ಟರ್ಫ್‌ಕ್ಲಬ್ ಹತ್ತಿರದ ಶಿವಾನಂದ ಸ್ಟೋರ್ಸ್ ಹತ್ತಿರ, ಶಶಿಕುಮಾರ್ ಚಲಾಯಿಸುತ್ತಿದ್ದ ಕಾರು ಅಪಘಾತಕೀಡಾಗಿ ಅವರ ಮುಖಕ್ಕೆ ಗಂಭೀರವಾದ ಗಾಯಗಳಾದವು. ಅಸಲಿಗೆ, ಶಶಿಕುಮಾರ್ ಕಾರು ಚಲಾಯಿಸುವ ಸಂದರ್ಭದಲ್ಲಿ ಮಿತಿಮೀರಿ ಕುಡಿದಿದ್ದು, ನಂತರ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿತ್ತು. ಮುಖಕ್ಕೆ ಆದ ಗಂಭೀರ ಹಾನಿಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಯಿತು. ಶಸ್ತ್ರಚಿಕಿತ್ಸೆಯ ನಂತರ ಶಶಿ ಅವರ ಮುಖದ ಚಹರೆಯೇ ಬದಲಾಯಿತು. ಆನಂತರ ಶಶಿಕುಮಾರ್ ಅವರಿಗೆ ಚಲನಚಿತ್ರರಂಗದಿಂದ ಬರುತ್ತಿದ್ದ ಅವಕಾಶ ಇಳಿಮುಖವಾಯಿತು. == ರಾಜಕಾರಿಣಿಯಾಗಿ == ಶಶಿಕುಮಾರ್, ಚಿತ್ರದುರ್ಗದಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಿ, ೧೯೯೯ರಲ್ಲಿ ಲೋಕಸಭೆಗೆ ಆಯ್ಕೆಯಾದರು. ೨೦೦೪ರಲ್ಲಿ ಜನತಾದಳ(ಯು) ಪಕ್ಷದಲ್ಲಿ ಇದ್ದ ಶಶಿಕುಮಾರ್, ೨೦೦೪ರಿಂದ ೨೦೦೬ರವರೆಗೆ ಜನತಾದಳ(ಜಾತ್ಯತೀತ) ಪಕ್ಷದ ಸದಸ್ಯರಾಗಿದ್ದರು, ೨೦೦೬ನೇ ಇಸವಿಯಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೨೦೧೮ನೇ ಇಸವಿಯಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ತ್ಯಜಿಸಿ, ಮತ್ತೆ ಜನತಾದಳ(ಜಾತ್ಯತೀತ) ಪಕ್ಷಕ್ಕೆ ಸೇರ್ಪಡೆಯಾದರು. == ಉಲ್ಲೇಖಗಳು ==